ಕವಿತೆ
ಮೌನದೊಳಗೊಂದು ಪ್ರಸವ
ಎಂದಿನಂತಿಲ್ಲ
ಮನದೊಳಗಿನ ಈ ಮೌನ
ಯಾವುದೋ ಸದ್ದು, ಸದ್ದಿಲ್ಲದೇ ನುಸುಳಿ
ಸುಳಿ ಸುಳಿದು ಸರಿಯುತ್ತಿದೆ
ಏಕಾಂತದ ಕಾಂತಿಯಲ್ಲೇನೋ
ಕೊರತೆ....
ಕಾರಣವಿಲ್ಲದೇ ಕುಣಿಯುವ
ಭಾವ ಬಿಂದುಗಳು
ಬಂಧಿಸಲಾಗದ ಭೀಕರ ಕಂಪನಗಳು
ತನ್ನಷ್ಟಕ್ಕೆ ತಾನೇ ಉರಿದುರಿದು
ತಣಿಯುವ ತರಂಗಗಳ ಹಿಂದಿರುವ
ತತ್ತ್ವ ಯಾವುದು....?
ಕಂಪನದಿಂದಲೇ ಶುರುವಾದದ್ದು
ಈ ಸದ್ದು....
ಅನುಕಂಪವಿರಲಿ ಅನುರಾಗವಿರಲಿ
ಆತಂಕವಿರಲಿ ಅಭಿಮಾನವಿರಲಿ
ಎಲ್ಲದರ ಮೂಲ
ಒಂದು ಕಂಪನ....
ಈ ಮೌನದೊಳಗೆ ಬಂದು
ಆಟವಾಡುವ ಅಲೆಗಳ
ಬೇಟೆಯಾಡಲು
ಹೂಡಿದ ಶರಗಳೆಲ್ಲವೂ
ಶಿಥಿಲವಾಗಿವೆ....
ಬೀಸಿದ ಬಲೆಯಲ್ಲಿ ಬೀಳದೆ
ಉಸಿರಿನ ಬಿಸಿಯೇರಿಸಿ
ಬಸಿರಾದ ಭಾವಗಳಿಗೇನು ಗೊತ್ತು
ಪ್ರಸವ ವೇದನೆ...
〽️ಮಹೇಶ್ ಹೆಗಡೆ ಹಳ್ಳಿಗದ್ದೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ