ಕವಿತೆ
ಮೌನದೊಳಗೊಂದು ಪ್ರಸವ ಎಂದಿನಂತಿಲ್ಲ ಮನದೊಳಗಿನ ಈ ಮೌನ ಯಾವುದೋ ಸದ್ದು, ಸದ್ದಿಲ್ಲದೇ ನುಸುಳಿ ಸುಳಿ ಸುಳಿದು ಸರಿಯುತ್ತಿದೆ ಏಕಾಂತದ ಕಾಂತಿಯಲ್ಲೇನೋ ಕೊರತೆ.... ಕಾರಣವಿಲ್ಲದೇ ಕುಣಿಯುವ ಭಾವ ಬಿಂದುಗಳು ಬಂಧಿಸಲಾಗದ ಭೀಕರ ಕಂಪನಗಳು ತನ್ನಷ್ಟಕ್ಕೆ ತಾನೇ ಉರಿದುರಿದು ತಣಿಯುವ ತರಂಗಗಳ ಹಿಂದಿರುವ ತತ್ತ್ವ ಯಾವುದು....? ಕಂಪನದಿಂದಲೇ ಶುರುವಾದದ್ದು ಈ ಸದ್ದು.... ಅನುಕಂಪವಿರಲಿ ಅನುರಾಗವಿರಲಿ ಆತಂಕವಿರಲಿ ಅಭಿಮಾನವಿರಲಿ ಎಲ್ಲದರ ಮೂಲ ಒಂದು ಕಂಪನ.... ಈ ಮೌನದೊಳಗೆ ಬಂದು ಆಟವಾಡುವ ಅಲೆಗಳ ಬೇಟೆಯಾಡಲು ಹೂಡಿದ ಶರಗಳೆಲ್ಲವೂ ಶಿಥಿಲವಾಗಿವೆ.... ಬೀಸಿದ ಬಲೆಯಲ್ಲಿ ಬೀಳದೆ ಉಸಿರಿನ ಬಿಸಿಯೇರಿಸಿ ಬಸಿರಾದ ಭಾವಗಳಿಗೇನು ಗೊತ್ತು ಪ್ರಸವ ವೇದನೆ... 〽️ಮಹೇಶ್ ಹೆಗಡೆ ಹಳ್ಳಿಗದ್ದೆ